ಅಮೃತಸರ: ಖ್ಯಾತ ಪಂಜಾಬಿ ಗಾಯಕ ಸಿದ್ದು ಮೂಸೆವಾಲ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದ ಇಬ್ಬರು ಆರೋಪಿಗಳನ್ನು ಜೈಲಿನಲ್ಲಿಯೇ ಹತ್ಯೆ ಮಾಡಲಾಗಿದೆ. ಪಂಜಾಬಿನ ತರನ್ ತರನ್ ಜಿಲ್ಲೆಯ ಗೊಯಿನ್ಡ್ವಾಲ್ ಸಾಹೀಬ್ ಸೆಂಟ್ರಲ್ ಜೈಲಿನಲ್ಲಿ ಚೂಪಾದ ಆಯುಧಗಳಿಂದ ಇಬ್ಬರನ್ನು ಹತ್ಯೆ ಮಾಡಲಾಗಿದೆ.
ಬಟಾಲಾದ ಮಂದೀಪ್ ಸಿಂಗ್ ಆಲಿಯಾಸ್ ತೂಫಾನ್ ಹಾಗೂ ಬಟಿಂಡಾದ ಬುಧಾಲ್ದ ವಾಸಿ ಮನಮೋಹನ್ ಸಿಂಗ್ ಆಲಿಯಾಸ್ ಮೋನಾ ಮೃತ ದುರ್ದೈವಿಗಳು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಕೇಶವ್ ಎಂಬಾತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಆರೋಪಿಗಳ ಮೇಲೆ ವಿರೋಧಿ ಬಣ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಚೂಪಾದ ವಸ್ತುಗಳಿಂದ ದಾಳಿ ನಡೆಸಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಗಾಯಕ ಸಿದ್ದು ಮೂಸೆವಾಲ ಅವರನ್ನು ಕಳೆದ ವರ್ಷದ ಮೇ 29 ರಂದು ಗುಂಡಿಕ್ಕಿ ಭೀಕರವಾಗಿ ಹತ್ಯೆ ಮಾಡಲಾಗಿದ್ದು, ಇದರಲ್ಲಿ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಹಾಗೂ ಜಗ್ಗು ಭಗವಾನ್ ಪುರಿಯಾ ಗ್ಯಾಂಗ್ ಒಟ್ಟಾಗಿ ಈ ಕೃತ್ಯ ನಡೆಸಿತ್ತು ಎಂದು ತಿಳಿದು ಬಂದಿದೆ. ಈ ಎರಡು ಗ್ಯಾಂಗುಗಳ ನಡುವೆಯೇ ವೈರತ್ವ ಇದ್ದ ಕಾರಣ ಪ್ರತ್ಯೇಕ ಸೆಲ್ ನಲ್ಲಿ ಇರಿಸಲಾಗಿತ್ತು. ಆದರೆ ಭಾನುವಾರದಂದು ಊಟದ ಸಂದರ್ಭದಲ್ಲಿ ಮುಖಾಮುಖಿಯಾದಾಗ ಎರಡು ಗ್ಯಾಂಗ್ ಗಳ ನಡುವೆ ಮಾರಾಮಾರಿ ನಡೆದಿದೆ ಎನ್ನಲಾಗುತ್ತಿದೆ.