ಸುರತ್ಕಲ್: ಸುರತ್ಕಲ್ ಟೋಲ್ ಗೇಟ್ ಅಕ್ರಮವಾಗಿದ್ದು, ಕೂಡಲೇ ಇದನ್ನು ತೆರವುಗೊಳಿಸುವಂತೆ ಆಗ್ರಹಿಸಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಇಂದಿನಿಂದ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ನಡೆಯುತ್ತಿದೆ.
ಬೆಳಗ್ಗೆ 10 ಗಂಟೆಗೆ ಜಮಾಯಿಸಿದ ಹೋರಾಟ ಸಮಿತಿ ಮುಖಂಡರು, ಸದಸ್ಯರು ಟೋಲ್ ಗೇಟ್ ಮುಂಭಾಗದಲ್ಲಿ ಧರಣಿ ಕೂತಿದ್ದಾರೆ.
ಈ ವೇಳೆ ಮಾತಾಡಿದ ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ ಅವರು, “ಸಂಸದ ನಳಿನ್ ಕುಮಾರ್ ಕಟೀಲ್ ಮೇಲೆ ಜಿಲ್ಲೆಯ ಜನರು ವಿಶ್ವಾಸ ಕಳೆದುಕೊಂಡಿದ್ದಾರೆ. ಏಳು ವರ್ಷಗಳಿಂದ ಟೋಲ್ ತೆರವಿಗೆ ದಿನಾಂಕ ಮುಂದೂಡುತ್ತಲೇ ಇದ್ದಾರೆ. ಈಗ ನವೆಂಬರ್ 9 ಗಡುವು ನೀಡಿದ್ದಾರೆ. ಆದರೆ ಅವರನ್ನು ನಂಬುವ ಹಾಗಿಲ್ಲ. ಪ್ರತಿಭಟನೆ ಎದುರಿಸಲು ಜಿಲ್ಲಾಡಳಿತ ಸೆಕ್ಷನ್ 144ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಆದರೆ ಇದರಿಂದ ನಮ್ಮ ಹೋರಾಟ ನಿಲ್ಲುವುದಿಲ್ಲ. ಇಲ್ಲಿಂದ ಟೋಲ್ ಗೇಟ್ ತೆರವುಗೊಳ್ಳುವ ತನಕ ಹಗಲು ರಾತ್ರಿ ಹೋರಾಟ ಮುಂದುವರಿಯಲಿದೆ” ಎಂದರು.
ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಬಿ. ಕೆ. ಇಮ್ತಿಯಾಜ್, ರಾಘವೇಂದ್ರ ರಾವ್, ಎಂ. ಜಿ ಹೆಗಡೆ ಮಾಜಿ ಸಚಿವ ಅಭಯಚಂದ್ರ ಜೈನ್, ಮಾಝಿ ಶಾಸಕ ಮೊಯ್ದೀನ್ ಬಾವಾ ಮತ್ತಿತರರು ಧರಣಿ ಕೂತಿದ್ದಾರೆ.
ಧರಣಿ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದಾರೆ.