ವಾಣಿಜ್ಯ ಜಾಹಿರಾತು

ಮಂಗಳೂರು: ಬಸ್​ನಲ್ಲಿ ತೆರಳುತ್ತಿದ್ದ ವೇಳೆ‌ ವ್ಯಕ್ತಿಯೊಬ್ಬರು ಮಹಿಳೆಯ ಜೊತೆಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ ತಂಡವೊಂದು ಆತನನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿರುವ ಘಟನೆ ಬಂಟ್ವಾಳ ತಾಲೂಕಿನ ರಾಯಿ ಎಂಬಲ್ಲಿ ನಡೆದಿದೆ. ಸದ್ಯ ಘಟನೆಯ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮೇಸ್ತ್ರಿ ಕೆಲಸ ಮಾಡುತ್ತಿರುವ 45 ವರ್ಷದ ವ್ಯಕ್ತಿಯೊಬ್ಬರು ಬಿ.ಸಿ.ರೋಡ್​ನಿಂದ ಮೂಡಬಿದ್ರೆಗೆ ಖಾಸಗಿ ಬಸ್​ನಲ್ಲಿ ತೆರಳುತ್ತಿದ್ದರು. ಬಸ್ ನಲ್ಲಿ ಸಾಕಷ್ಟು ಜನರಿದ್ದ ಕಾರಣ ವ್ಯಕ್ತಿ ಕುಳಿತಿದ್ದ ಸೀಟಿನ ಬಳಿ ನಿಂತಿದ್ದ ಮಹಿಳೆ ಆ ವ್ಯಕ್ತಿಗೆ ಬ್ಯಾಗ್ ಹಿಡಿದುಕೊಳ್ಳುವಂತೆ ತಿಳಿಸಿದ್ದಾರೆ. ಬಳಿಕ ಮಹಿಳೆ ತಾನು ಇಳಿಯುವ ಜಾಗದಲ್ಲಿ ವ್ಯಕ್ತಿಯಿಂದ ಬ್ಯಾಗ್ ಪಡೆದು ತೆರಳಿದ್ದಾರೆ.

ಇದಾದ ಬಳಿಕ ವ್ಯಕ್ತಿಯ ಬಳಿ ಬಂದ ಬಸ್ ಕಂಡೆಕ್ಟರ್ ನೀವು ಮಹಿಳೆಯ ಜೊತೆ ಅನುಚಿತವಾಗಿ ವರ್ತಿಸಿದ್ದೀರಿ ಎಂದು ಆರೋಪಿಸಿ ಬಸ್​ನಿಂದ ಕೆಳಗಿಳಿಸಿ ಹಲ್ಲೆ ನಡೆಸಿದ್ದಾನೆ ಎನ್ನಲಾಗ್ತಿದೆ. ಹಲ್ಲೆ ವೇಳೆ ಬಸ್​ ಕಂಡಕ್ಟರ್​ ಕೆಲವರಿಗೆ ಮೊಬೈಲ್​ನಲ್ಲಿ ಕರೆ ಮಾಡಿ ಕೆಲ ಯುವಕರನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾರೆ ಬಳಿಕ ಕಂಡಕ್ಟರ್ ಯುವಕರ ಗುಂಪಿಗೆ ವ್ಯಕ್ತಿಯನ್ನು ನೀಡಿದ್ದಾರೆ.

ಯುವಕರ ಗುಂಪು ವ್ಯಕ್ತಿಯನ್ನು ರಿಕ್ಷಾದಲ್ಲಿ ಕರೆದುಕೊಂಡು ಹೋಗಿ ರಾಯಿ ಎಂಬಲ್ಲಿನ ನಿರ್ಜನ ಪ್ರದೇಶದಲ್ಲಿ ಮರಕ್ಕೆ ಕಟ್ಟಿ ಹಾಕಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹಲ್ಲೆಗೊಳಗಾದ ವ್ಯಕ್ತಿ ತೀವ್ರ ಅಸ್ವಸ್ಥರಾದ ಮೇಲೆ ಯುವಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗಿದೆ. ಪೊಲೀಸರು ಹಲ್ಲೆಗೊಳಗಾದ  ವ್ಯಕ್ತಿಯನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿ ಬಳಿಕ ಠಾಣೆಗೆ ಕರೆದೊಯ್ದಿದ್ದಾರೆ ಎನ್ನಲಾಗುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಷ್ ಭಗವಾನ್ ಸೋನಾವಾಣೆ, ಹಲ್ಲೆಯ ಕುರಿತು ಗಮನಕ್ಕೆ ಬಂದಿದೆ. ವಿಡಿಯೋ ಪರಿಶೀಲಿಸಲಾಗಿದೆ. ಆಸ್ಪತ್ರೆಯಿಂದ ವರದಿ ಬಂದ ಬಳಿಕ ಪ್ರಕರಣ ದಾಖಲಿಸಲಾಗುವುದು ಎಂದಿದ್ದಾರೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.