ಬಂಟ್ವಾಳ: ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿ ಸೇರಿದಂತೆ ಹಲವೆಡೆ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ನಗರ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಕಡಬ ತಾಲೂಕಿನ ಗೋಳಿತೊಟ್ಟು ಗ್ರಾಮ ನಿವಾಸಿ ಮೊಹಮ್ಮದ್ ಇರ್ಫಾನ್ ಬಂಧಿತ ಆರೋಪಿ.
ಬಂಧಿತ ಆರೋಪಿ ಬಿ.ಸಿ. ರೋಡು ಸಮೀಪದ ಗಾಣದ ಪಡುವಿನಲ್ಲಿರುವ ಹೋಲ್ಸೇಲ್ ಅಂಗಡಿಯ ಶಟರಿನ ಬೀಗ ಮುರಿದು ಅಂಗಡಿಯದ್ದ 20 ಸಾವಿರ ರೂ. ಮೌಲ್ಯದ 2 ಮೊಬೈಲ್ ಫೋನ್ ಹಾಗೂ 10 ಸಾವಿರ ರೂ. ನಗದನ್ನು ಕಳವು ಮಾಡಿದ್ದ. ಈ ಕುರಿತು ಅಂಗಡಿ ಮಾಲಕರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿತ್ತು.
ಜೊತೆಗೆ ಆರೋಪಿಯು ಕಳೆದ ವರ್ಷ ಬಿ.ಸಿ. ರೋಡಿನ ಬಸ್ಸು ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣವೊಂದರಲ್ಲಿದ್ದ ನ್ಯಾಯವಾದಿಯೊಬ್ಬರ ಕಚೇರಿಗೆ ನುಗ್ಗಿ 3 ಸಾವಿರ ರೂ. ನಗದು ಕಳವು ಮಾಡಿದ್ದ. ಆರೋಪಿಯು ಕೆಲವು ದಿನಗಳ ಹಿಂದೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಗೋಳಿತೊಟ್ಟುನಲ್ಲಿ ಮನೆಯೊಂದರ ಬೀಗ ಮುರಿದು ನಗದು ಕಳವು ಮಾಡಿದ್ದ ಎನ್ನಲಾಗಿದೆ.
ಈ ಎಲ್ಲ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ನಗರ ಠಾಣಾ ಇನ್ಸ್ಪೆಕ್ಟರ್ ವಿವೇಕಾನಂದ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಕಾರ್ಯಾಚರಣೆಯಲ್ಲಿ ನಗರ ಠಾಣಾ ಪಿಎಸ್ಐಗಳಾದ ಅವಿನಾಶ್, ಕಲೈಮಾರ್, ಸಿಬಂದಿ ರಾಜೇಶ್, ಇರ್ಷಾದ್, ಗಣೇಶ್ ಹಾಗೂ ಪ್ರವೀಣ್ ಭಾಗವಹಿಸಿದ್ದರು.