ಸುಳ್ಯ(ದಕ್ಷಿಣ ಕನ್ನಡ): ಕರಾವಳಿಯಲ್ಲಿ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿರುವ ಅಡಿಕೆಗೆ ಇತ್ತೀಚೆಗೆ ಹಳದಿ ಎಲೆ ರೋಗ, ಎಲೆ ಚುಕ್ಕಿ ರೋಗಗಳು ಕಾಣಿಸಿಕೊಳ್ಳುತ್ತಿದ್ದು ಇದರಿಂದ ಕೃಷಿಕರು ಕಂಗಾಲಾಗಿದ್ದಾರೆ. ಇತ್ತ ಅಡಿಕೆ ತೋಟಕ್ಕೆ ಔಷಧಿ ಸಿಂಪಡಣೆ ಅನಿವಾರ್ಯವಾಗಿದೆ. ಇದೀಗ ಜಿಲ್ಲೆಯಲ್ಲಿ ಮೊದಲ ಭಾರಿಗೆ ಪ್ರಯೋಗಿಕವಾಗಿ ಡ್ರೋನ್ ಮೂಲಕ ಔಷಧಿ ಸಿಂಪಡಣೆ ಮಾಡಲಾಗಿದ್ದು ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.
ಸುಳ್ಯ ತಾಲೂಕಿನ ಸಾಕಷ್ಟು ಕಡೆಗಳಲ್ಲಿ ಅಡಿಕೆಗೆ ಹಳದಿ ಎಲೆ, ಎಲೆಚುಕ್ಕಿ ರೋಗದಿಂದ ಸಾಕಷ್ಟು ಪ್ರಮಾಣದಲ್ಲಿ ನಷ್ಟವಾಗಿದೆ. ಈ ರೋಗದಿಂದ ಇಡೀ ಅಡಿಕೆ ತೋಟವೇ ಹಾನಿಗೊಳಗಾಗಿ ರೈತರು ಸಂಕಷ್ಟ ಅನುಭವಿಸಿದ್ದಾರೆ. ಇವುಗಳಿಗೆ ಔಷಧಿ ಕಂಡುಹಿಡಿಯುವ ಪ್ರಕ್ರಿಯೆಗಳು ವಿಜ್ಞಾನಿಗಳ ಹಂತದಲ್ಲಿ ನಿರಂತರವಾಗಿ ನಡೆಯುತ್ತಿದ್ದರೂ, ಕೃಷಿಕರು ತಮ್ಮ ಅನುಭವದ ಮೂಲಕ ವಿವಿಧ ರೀತಿಯ ಔಷಧಗಳ ಮೂಲಕ ಪ್ರಯೋಗಾತ್ಮಕವಾಗಿ ಔಷಧಿ ಸಿಂಪಡಿಸಿ ರೋಗ ನಿಯಂತ್ರಣಕ್ಕೆ ಶ್ರಮ ವಹಿಸುತ್ತಿದ್ದಾರೆ.
ಅಡಿಕೆಗೆ ಒಂದು ಕಡೆ ಎಲೆಚುಕ್ಕಿ ರೋಗವಾಗಿದ್ರೆ ಮತ್ತೊಮದು ಕಡೆ ಔಷಧಿ ಸಿಂಪಡಣೆಗೆ ಕಾರ್ಮಿಕರ ಕೊರತೆಯೂ ಎದುರಾಗಿದೆ. ಇದರಿಂದ ರೈತರು ನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ. ಅಡಿಕೆ ಎಲೆಚುಕ್ಕಿ ಪೀಡಿತ ತೋಟಕ್ಕೆ ಔಷಧಿ ಸಿಂಪಡಣೆಗೆ ಡ್ರೋನ್ ಬಳಕೆ ಮಾಡಲಾಗುತ್ತಿದೆ. ಸುಳ್ಯ ತಾಲೂಕಿನ ಕಳಂಜ ಗ್ರಾಮದ ಗಿರಿಕೃಪಾ ಫಾರ್ಮ್ನ ಸುದರ್ಶನ ಕೋಟೆ ಅವರು ಡ್ರೋನ್ ಮೂಲಕ ಪ್ರಾಯೋಗಿಕ ಔಷಧಿ ಸಿಂಪಡಣೆಗೆ ಮುಂದಾಗಿದ್ದಾರೆ.
‘ಮಲ್ಟಿಪ್ಲೆಕ್ಸ್ ಎಂ’ ಸಂಸ್ಥೆಯ ಹೆಸರಿನ ಡ್ರೋನ್ ಅನ್ನು ಔಷಧಿ ಸಿಂಪಡಣೆಗೆ ಬಳಕೆ ಮಾಡಿಕೊಂಡಿದ್ದು, ಇದರಲ್ಲಿ ಸುಮಾರು 10 ಲೀಟರ್ ಸಾಮರ್ಥ್ಯದ ಟ್ಯಾಂಕ್ ಹೊಂದಿದೆ. 10 ಲೀಟರ್ ಔಷಧಿ ತುಂಬಿಸಿದ ಬಳಿಕ ಡ್ರೋನ್ 25 ಕೆ.ಜಿ. ತೂಕವಿರಲಿದೆ. 10 ಲೀಟರ್ ಔಷಧಿಯಲ್ಲಿ ಅರ್ಧ ಎಕರೆ ತೋಟಕ್ಕೆ ಸಿಂಪಡಿಸಬಹುದಾಗಿದೆ. 15 ನಿಮಿಷದಲ್ಲಿ ಸಿಂಪಡಣೆ ಕಾರ್ಯ ಮುಗಿಯಲಿದೆ. ಡ್ರೋನ್ ಮೂಲಕ ಔಷಧ ಸಿಸ್ಟಮ್ಯಾಟಿಕ್ ಫಂಗಿಸೈಡ್ ಮಾದರಿಯಲ್ಲಿ ನಡೆಯಲಿದ್ದು, ಡ್ರೋನ್ ಅಡಿಕೆ ಮರಗಳ ಮೇಲ್ಭಾಗದಿಂದ ಅಡಿಕೆ ಮರದ ಎಲೆಗಳ ಮೇಲೆ ಔಷಧಿ ಸಿಂಡನೆಯಾಗುತ್ತದೆ. ಸಂಸ್ಥೆಯವರೇ ಡ್ರೋನ್ ಅನ್ನು ನಿರ್ವಹಿಸುತ್ತಾರೆ.