ಕೋಸ್ಟಲ್ ವುಡ್ ನಲ್ಲಿ ಸಾಲು ಸಾಲು ಸಿನಿಮಾಗಳು ಸೆಟ್ಟೇರಿದ್ದು, ತೆರೆಗೆ ಬರಲು ಸಜ್ಜಾಗಿದೆ. ಈ ಸಿನಿಮಾಗಳ ಗೌಜಿ ಗಮ್ಮತ್ತಿನ ನಡುವೆ, ಇದೀಗ ‘ಗೌಜಿ ಗಮ್ಮತ್’ ಎಂಬ ಟೈಟಲ್ ಇಟ್ಟುಕೊಂಡು ಹೊಸ ಸಿನಿಮಾವೊಂದು ಸೆಟ್ಟೇರಿದೆ. ಹೆಸರೇ ಹೇಳುವಂತೆ ಗಮ್ಮತ್ತಿನೊಂದಿಗೆ(ಹಾಸ್ಯ) ಕೌಟುಂಬಿಕ ಕಥಾಹಂದರ ಸಿನಿಮಾ ಇದಾಗಿದ್ದು, ಇತ್ತೀಚೆಗಷ್ಟೇ ಚಿತ್ರದ ಸಂಪೂರ್ಣ ಚಿತ್ರೀಕರಣ ಮುಕ್ತಾಯಗೊಂಡಿದೆ. ಸಿನಿಮಾ ಈಗ ಎಡಿಟಿಂಗ್ ಹಂತದಲ್ಲಿದೆ. ಮೊವಿನ್ ಫಿಲಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಮೋಹನ್ ಭಟ್ಕಳ, ವಿನಾಯಕ್ ತೀರ್ಥಹಳ್ಳಿ ಬಂಡವಾಳ ಹೂಡಿದ್ದಾರೆ.
ಈ ಹಿಂದೆ ಹಲವಾರು ಚಿತ್ರಗಳಲ್ಲಿ ನಟಿಸಿ, ನಿರ್ದೇಶನ ತಂಡದಲ್ಲಿ ಕೆಲಸ ಮಾಡಿ ಅನುಭವವುಳ್ಳ ಕರ್ಣ ಉಡುಪಿ ಮೊದಲ ಬಾರಿಗೆ ನಾಯಕ ನಟನಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿ ನಟಿಯಾಗಿ ಉಡುಪಿಯ ಸ್ವಾತಿ ಶೆಟ್ಟಿ ನಟಿಸಿದ್ದಾರೆ.
ಈ ಚಿತ್ರದಲ್ಲಿ ದೊಡ್ಡ ತಾರಾಗಣವಿದ್ದು ತುಳುನಾಡ ಹಾಸ್ಯ ದಿಗ್ಗಜರಾದ ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಪ್ರಸನ್ನ ಶೆಟ್ಟಿ ಬೈಲೂರು, ಉಮೇಶ್ ಮಿಜಾರು ಪ್ರೇಕ್ಷಕರಿಗೆ ನಗುವಿನ ಔತಣ ಬಡಿಸಲು ಸಿದ್ದರಾಗಿದ್ದಾರೆ. ಚಂದ್ರಹಾಸ ಮಾಣಿ, ಜಯಶೀಲ ಮರೋಳಿ, ಸುಜಾತ ಶಕ್ತಿನಗರ, ವಾಣಿ , ರಾಧಿಕ ಭಟ್, ಹರೀಶ್ ಚಂದ್ರ ಪೆರಾಡಿ, ಪ್ರಭಾಕರ್ ಬ್ರಹ್ಮಾವರ, ಪ್ರಭಾಕರ ಆಚಾರ್ಯ ಮೂಡುಬೆಳ್ಳೆ ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಈ ಚಿತ್ರಕ್ಕೆ ಮಣಿ ಎಜೆ ಕಾರ್ತಿಕೇಯನ್ ಆಕ್ಷನ್ ಕಟ್ ಹೇಳಿದ್ದು, ಹಲವಾರು ಕನ್ನಡ, ತುಳು ಸಿನಿಮಾಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಸಂದೀಪ್ ಬೆದ್ರ ಮೊದಲ ಬಾರಿಗೆ ಈ ಸಿನಿಮಾದ ಚಿತ್ರಕಥೆ – ಸಂಭಾಷಣೆ ಬರೆದಿದ್ದಾರೆ.
‘ಗೌಜಿ ಗಮ್ಮತ್’ ಸಿನಿಮಾಗೆ ಕಾರ್ಯಕಾರಿ ನಿರ್ಮಾಪಕರಾಗಿ ತುಷಾರ್ ಸುರತ್ಕಲ್, ನಿರ್ದೇಶನ ತಂಡದಲ್ಲಿ ರಾಮದಾಸ್ ಸಸಿಹಿತ್ಲು, ಸಂದೀಪ್ ಬೆದ್ರ, ಕರ್ಣ ಉಡುಪಿ, ಗೌರವ್ ರೈ, ಆರ್ಟ್ ಡಿಪಾರ್ಟ್ಮೆಂಟ್ – ಕೃಷ್ಣ, ಛಾಯಾಗ್ರಹಣ ವಿ ರಾಮಾಂಜನೇಯ, ಛಾಯಾಗ್ರಹಣ ಸಹಾಯ – ವೇಣು, ಸಂಕಲನ ಮೆವಿನ್ ಜೊಯಿಲ್ ಪಿಂಟೊ, ಮೇಕಪ್ – ಮಂಜುನಾಥ್ ಶೆಟ್ಟಿಗಾರ್ ಮುಂಬೈ, ಪೊಸ್ಟರ್ ಡಿಸೈನ್ – ಎಡಿಟಿವ್ ಕ್ರಿಯೇಷನ್, ಪ್ರೊಡಕ್ಷನ್ನಲ್ಲಿ ಹರೀಶ್ ಕಡ್ತಲ, ಕಿಶೋರ್ ಶೆಟ್ಟಿ ಪಿಲಾರ್, ಪ್ರಮೋದ್ ಅಶ್ವತ್ಥಪುರ, ಅವಿನಾಶ್ ವಿಟ್ಲ, ಸ್ಥಿರ ಚಿತ್ರೀಕರಣ ಹುಲುಗಪ್ಪ ಬಳ್ಳಾರಿ, ಹೀಗೆ ನುರಿತ ತಂತ್ರಜ್ಞರು ಈ ಸಿನಿಮಾ ತಂಡದಲ್ಲಿದ್ದಾರೆ.
ಚಿತ್ರದ ಹಾಡುಗಳಿಗೆ ಕಿಶೋರ್ ಮೂಡಬಿದಿರೆ ಸಾಹಿತ್ಯವಿದ್ದು, ಸಂಗೀತ ನಿರ್ದೇಶನದ ಜವಾಬ್ದಾರಿಯನ್ನು ದಕ್ಷಿಣ ಭಾರತದ ಹೆಸರಾಂತ ಸಂಗೀತ ನಿರ್ದೇಶಕ ಸ್ಯಾಮ್ ವಹಿಸಿಕೊಂಡಿದ್ದಾರೆ. ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ 32 ಮಿಲಿಯನ್ ವೀಕ್ಷಣೆ ಪಡೆದುಕೊಂಡು ವೈರಲ್ ಆಗಿದ್ದ ‘ಕಕ್ಷಿ ಅಮ್ಮಿನಿಪಿಲ್ಲ’ ಮಲಯಾಳಂ ಸಿನಿಮಾದ ಹಾಡು ಸ್ಯಾಮ್ ಅವರ ಕೊಡುಗೆಯಾಗಿದ್ದು , ಇದೀಗ ‘ಗೌಜಿ ಗಮ್ಮತ್ತ್’ ಸಿನಿಮಾದಲ್ಲೂ ಮತ್ತದೇ ಸಂಗೀತದ ಮೋಡಿ ಮಾಡಿ ಪ್ರೇಕ್ಷಕರನ್ನು ರಂಜಿಸಲು ತಯಾರಾಗಿದ್ದಾರೆ. ಹೀಗಾಗಿ ಅವರ ಸಂಗೀತ ಈ ಚಿತ್ರದ ಪ್ಲಸ್ ಪಾಯಿಂಟ್.
‘ಈ ಚಿತ್ರದ ತುಂಬ ಹಾಸ್ಯ ತುಂಬಿದ್ದು, ಅದರ ಜೊತೆಗೆ ಉತ್ತಮ ಸಂದೇಶವನ್ನು ನೀಡುವ ಉದ್ದೇಶದಿಂದ ಎಲ್ಲೂ ರಾಜಿ ಮಾಡಿಕೊಳ್ಳದೇ ಅಚ್ಚುಕಟ್ಟಾಗಿ ಸಿನಿಮಾ ನಿರ್ಮಿಸುತ್ತಿದ್ದೇವೆ.. ಉಡುಪಿ ಪರಿಸರದಲ್ಲಿ ಸಂಪೂರ್ಣ ಚಿತ್ರೀಕರಣ ನಡೆದಿದ್ದು, ಸಿನಿಮಾ ಅದ್ಭುತವಾಗಿ ಮೂಡಿ ಬಂದಿದೆ’ ಎಂದು ನಿರ್ಮಾಪಕ ಮೋಹನ್ ಭಟ್ಕಳ ಅವರು ಮಾಹಿತಿ ನೀಡಿದ್ದಾರೆ.
ಸಿನಿಮಾದ ಸೆನ್ಸಾರ್ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಅಕ್ಟೋಬರ್ ತಿಂಗಳಲ್ಲಿ ಸಿನಿಪ್ರಿಯರನ್ನು ರಂಜಿಸಲು ‘ಗೌಜಿ ಗಮ್ಮತ್ತ್’ ಬೆಳ್ಳಿತೆರೆಗೆ ಬರಲು ಸಜ್ಜಾಗುತ್ತಿದೆ.