ಪುತ್ತೂರು: ಕಂಬಳದಲ್ಲಿ ಚಿತ್ರನಟಿ ಸಾನ್ಯಾ ಅಯ್ಯರ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದ ವೇಳೆ ಯುವಕನೋರ್ವ ಕಿರುಕುಳ ನೀಡಿದ್ದು ಇದೀಗ ಘಟನೆಯ ಕುರಿತು ಹಿಂದೂ ಸಂಘಟನೆಗಳು ಕಂಬಳ ಆಯೋಜಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದೂ ಹೆಣ್ಣು ಮಕ್ಕಳ ಮೇಲೆ ಕಿರುಕುಳ ನೀಡಿದವರ ವಿರುದ್ದ ಕ್ರಮಕೈಗೊಳ್ಳಬೇಕೆಂದು ಹಿಂದೂ ಸಂಘಟನೆ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಹಿಂದೂ ಸಂಘಟನೆಯ ಮುಖಂಡ ದಿನೇಶ್ ಜೈನ್, ಜ. 28 ರಂದು ಪುತ್ತೂರು ಕಂಬಳದಲ್ಲಿ ಹೆಣ್ಣು ಮಕ್ಕಳಿಗೆ ಕಿರುಕುಳ ನೀಡಿದ ಎರಡು ಘಟನೆ ನಡೆದಿದೆ. ಚಿತ್ರನಟಿ ಸಾನ್ಯಾ ಐಯ್ಯರ್ ಎನ್ನುವ ಹಿಂದೂ ಹೆಣ್ಣುಮಗಳ ಮೇಲೆ ಕೈ ಹಾಕಲಾಗಿದೆ. ಅಲ್ಲದೆ ಇನ್ನೊಂದು ಕಡೆ ಹಿಂದೂ ಹೆಣ್ಣುಮಕ್ಕಳನ್ನು ಅಸಭ್ಯವಾಗಿ ಮೊಬೈಲ್ ನಲ್ಲಿ ವಿಡಿಯೋ ಮಾಡಲಾಗಿದ್ದು, ಎರಡೂ ಘಟನೆಯಲ್ಲಿ ಅನ್ಯಮತೀಯರೇ ಆರೋಪಿಗಳಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಬರುವ ಪುತ್ತೂರ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಈ ಘಟನೆ ನಡೆದಿರುವುದು ದುರಾದೃಷ್ಟಕರ. ದೇವರಗದ್ದೆಯಲ್ಲಿ ನಡೆದ ಕಂಬಳಕ್ಕೆ ಬರುವ ಸಾರ್ವಜನಿಕರಿಗೆ ರಕ್ಷಣೆ ಇಲ್ಲದಂತಾಗಿದೆ. ಕಂಬಳ ನೋಡಲು ಹೆಣ್ಣುಮಕ್ಕಳು, ಮಹಿಳೆಯರು ಹೆಚ್ಚಾಗಿ ಆಗಮಿಸುತ್ತಾರೆ, ಆದರೆ ಕೆಲವು ವ್ಯಕ್ತಿಗಳು ಇದಕ್ಕಾಗಿಯೇ ಕಂಬಳಕ್ಕೆ ಬಂದು ವಿಕೃತಿ ಮೆರೆಯುತ್ತಿದ್ದಾರೆ ಎಂದು ಆರೋಪಿಸಿದರು.
ದೇವರಗದ್ದೆಯಲ್ಲಿ ನಡೆಯುವ ಕೋಟಿ-ಚೆನ್ನಯ ಕಂಬಳದಲ್ಲಿ ಅನ್ಯಮತೀಯರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು, ಆದರೆ ಕಂಬಳ ನಡೆಸಲು ಅವಕಾಶ ನೀಡಿದ ದೇವಸ್ಥಾನದ ವ್ಯವಸ್ಥಾನಪನಾ ಮಂಡಳಿ ಈ ವಿಚಾರವನ್ನು ಗಂಭೀರವಾಗಿ ತೆಗದುಕೊಳ್ಳಬೇಕು. ವ್ಯಾಪಾರಕ್ಕೆ ಕೇವಲ ಹಿಂದೂಗಳಿಗೆ ಮಾತ್ರ ನೀಡಬೇಕು. ಎರಡು ಘಟನೆಗಳು ನಡೆದರೂ ಕಂಬಳ ಸಮಿತಿ ಈ ಬಗ್ಗೆ ಪೋಲಿಸ್ ದೂರು ನೀಡಿಲ್ಲ. ಮಹಿಳೆಯರ ಬಗ್ಗೆ ಕಾಳಜಿ ವಹಿಸುವ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಈ ವಿಚಾರದಲ್ಲಿ ಮೌನವಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.