ಬೆಂಗಳೂರು: ಯಶಸ್ವಿ ಮಂಗಳಯಾನ ಮತ್ತು ಚಂದ್ರಯಾನದ ಬಳಿಕ ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ ಇಸ್ರೋ ಮತ್ತೊಂದು ಮೈಲಿಗಲ್ಲು ಸಾಧಿಸೋಕೆ ಮುಂದಾಗಿದೆ. ಅದುವೇ ಶುಕ್ರಯಾನ. 2024ರ ವೇಳೆಗೆ ಇಸ್ರೋ ಶುಕ್ರಗ್ರಹಕ್ಕೆ ನೌಕೆಯೊಂದು ಹಾರಿಸಲು ಸಜ್ಜಾಗಿದೆ. ಒಂದು ವೇಳೆ 2024ರಲ್ಲಿ ನೌಕೆ ಉಡಾವಣೆ ಸಾಧ್ಯವಾಗದಿದ್ದರೆ 2031 ರ ತನಕ ಮತ್ತೊಮ್ಮೆ ಈ ಅವಕಾಶಕ್ಕೆ ಕಾಯಬೇಕಾಗುತ್ತದೆ ಎಂದು ಹೇಳಲಾಗಿದೆ.
ಈಗಾಗಲೇ ಅಮೇರಿಕಾ ಹಾಗೂ ಯುರೋಪಿಯನ್ ಒಕ್ಕೂಟ ಶುಕ್ರಯಾನ ಮಾಡೋದಕ್ಕೆ ಸಜ್ಜಾಗಿದೆ. ಇದೀಗ ಭಾರತ ಈ ಎರಡೂ ದೇಶಗಳಿಗೆ ಪೈಪೋಟಿ ನೀಡಲು ತಾನು ಕೂಡಾ ಶುಕ್ರನ ಅಂಗಳಕ್ಕೆ ಹಾರಲು ಸಜ್ಜಾಗಿದೆ.
ಈಗಾಗಲೇ ಮಂಗಳನ ಅಂಗಳಕ್ಕೆ ಹಾರಿ ಯಶಸ್ವಿ ಅಧ್ಯಯನಗಳನ್ನು ಕೈಗೊಂಡಿರೋ ಇಸ್ರೋ, ಮಂಗಳನಲ್ಲಿ ಮನುಷ್ಯರು ವಾಸಿಸಲು ಯೋಗ್ಯವೇ ಅಥವಾ ಇಲ್ಲವೇ ಅನ್ನುವ ಮಾಹಿತಿಯನ್ನು ಸಂಗ್ರಹಿಸಿದೆ.ಶುಕ್ರ ಗ್ರಹಕ್ಕೆ ತನ್ನ ನೌಕೆಯನ್ನು ಕಳುಹಿಸಿ ಅಲ್ಲಿನ ವಾತಾವರಣ ಅಧ್ಯಯನ ಮಾಡಲು ಮುಂದಾಗಿದೆ.
ಶುಕ್ರಗ್ರಹದಲ್ಲಿ ಸಲ್ಫರಿಕ್ ಆಸಿಡ್ನ ಮೋಡಗಳು ಮುಚ್ಚಿರುತ್ತದೆ. ಹೀಗಾಗಿ ಅಲ್ಲಿನ ವಾತಾವರಣ ವಿಷಯುಕ್ತವಾಗಿರಬಹುದು ಎಂದು ಹೇಳಲಾಗಿದೆ. ಶುಕ್ರನ ವಾತಾವರಣದ ಬಗ್ಗೆ ಇನ್ನಷ್ಟು ತಿಳಿಯಲು ಹಾಗೂ ಅಲ್ಲಿನ ಮಣ್ಣು , ಜ್ವಾಲಾಮುಖಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಅಧ್ಯಯನ ಮಾಡಲು ಇಸ್ರೋಗೆ ಶುಕ್ರಯಾನ ಸಹಕಾರಿಯಾಗಲಿದೆ.
ಈಗಾಗಲೇ ಈ ಯೋಜನೆಗಾಗಿ ಇಸ್ರೋ ಹಲವು ವರ್ಷಗಳಿಂದ ಸಿದ್ಧತೆ ಮಾಡಿಕೊಂಡಿದ್ದು,
ಇದೀಗ ಶುಕ್ರಯಾನದ ಮಹತ್ವದ ಯೋಜನೆಗೆ ಸಿದ್ಧಗೊಂಡಿದೆ. ಇಸ್ರೋ ಅಧ್ಯಕ್ಷ ಸೋಮನಾಥ್.ಎಸ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಪ್ರಕಟಿದ್ದಾರೆ. 2024ರ ಡಿಸೆಂಬರ್ ನಲ್ಲಿ ಶುಕ್ರ ಭೂಮಿಯ ಸಮೀಪದ ಕಕ್ಷೆಗೆ ಬರುತ್ತದೆ. ಆಗ ನೌಕೆನ್ನು ಶುಕ್ರನ ಕಕ್ಷೆಗೆ ತಳ್ಳೋದಕ್ಕೆ ಕಡಿಮೆ ಶಕ್ತಿ ಸಾಕಾಗುತ್ತದೆ. ಹೀಗಾಗಿ ಆ ಸಮಯವನ್ನೇ ಶುಕ್ರಯಾನ ನೌಕೆಯ ಉಡಾವಣೆಗೆ ಆಯ್ಕೆ ಮಾಡಿಕೊಳ್ಳಬೇಕು. ಈ ಸಮಯ ಬಿಟ್ಟರೆ ಮುಂದೆ 2031ರ ವರಲ್ಲಿ ಇಂತಹ ಅವಕಾಶ ಸಿಗಲಿದೆ ಎಂದಿದ್ದಾರೆ.