ಬೆಂಗಳೂರು: ರಾಜ್ಯಾದ್ಯಂತ ನಾನಾ ವಿಮಾನ ನಿಲ್ದಾಣ, ಏರ್ಸ್ಟ್ರಿಪ್ಗಳ ನಿರ್ಮಾಣ ಯೋಜನೆ ಚುರುಕುಗೊಳಿಸಲಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಿನಿ ಏರ್ಪೋರ್ಟ್ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದೆ ಎಂದು ವಸತಿ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳದಿಂದ 11 ಕಿ.ಮೀ. ದೂರದಲ್ಲಿ160 ಎಕರೆ ಜಾಗವನ್ನು ಮಿನಿ ಏರ್ ಪೋರ್ಟ್ ನಿರ್ಮಾಣಕ್ಕೆ ಗುರುತಿಸಲಾಗಿದ್ದು ಭೂಮಿ ಹಸ್ತಾಂತರವಾಗುತ್ತಿದ್ದಂತೆ ಕಾಮಗಾರಿ ಆರಂಭಿಸಲಾಗುವುದು. ಕೇಂದ್ರ ಸರಕಾರವೂ ಈ ಯೋಜನೆ ವಿಚಾರದಲ್ಲಿ ಹೆಚ್ಚು ಆಸಕ್ತಿ ಹೊಂದಿದೆ ಎಂದು ಸಚಿವ ವಿ ಸೋಮಣ್ಣ ತಿಳಿಸಿದರು.
ರಾಜ್ಯಾದ್ಯಂತ ನಾನಾ ವಿಮಾನ ನಿಲ್ದಾಣ, ಏರ್ಸ್ಟ್ರಿಪ್ಗಳ ನಿರ್ಮಾಣ ಯೋಜನೆ ಚುರುಕುಗೊಳಿಸಲಾಗಿದೆ. ಶಿವಮೊಗ್ಗ ವಿಮಾನನಿಲ್ದಾಣ ಸಿದ್ಧವಾಗಿದ್ದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಅಧಿಕಾರಿಗಳು ಎರಡು, ಮೂರು ಬಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಿವಮೊಗ್ಗ ವಿಮಾನನಿಲ್ದಾಣ ಬಹುತೇಕ ಫೆಬ್ರವರಿಯಲ್ಲಿಉದ್ಘಾಟನೆಯಾಗಲಿದ್ದು ಸದ್ಯದಲ್ಲೇ ಮಹೂರ್ತ ನಿಗದಿಯಾಗಲಿದೆ ಎಂದು ಹೇಳಿದರು.
ರಾಯಚೂರು ವಿಮಾನ ನಿಲ್ದಾಣ ನಿರ್ಮಾಣ ಯೋಜನೆಗೆ ಲೋಕೋಪಯೋಗಿ ಇಲಾಖೆ ಮೂಲಕ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ವಿಜಯಪುರ ವಿಮಾನನಿಲ್ದಾಣ ಯೋಜನೆಗೂ ವೇಗ ಸಿಕ್ಕಿದೆ. ಹಾಸನ ಏರ್ಪೋರ್ಟ್ ರನ್ವೇ ಕೆಲಸ ಈಗಾಗಲೇ ಮುಗಿದಿದೆ. ಕಾಮಗಾರಿ ನಿರೀಕ್ಷೆಗಿಂತ ವೇಗವಾಗಿ ನಡೆಯುತ್ತಿದೆ ಎಂದರು.
ರಾಜ್ಯದ ಮಧ್ಯಭಾಗದ ದಾವಣಗೆರೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ವಿಶೇಷ ಆಸಕ್ತಿ ವಹಿಸಲಾಗಿದ್ದು, 500 ಎಕರೆ ಭೂಮಿಯ ಅಗತ್ಯವಿದೆ. ಈ ಯೋಜನೆ ಪ್ರಸ್ತಾಪದ ಹಿನ್ನೆಲೆಯಲ್ಲಿಉದ್ದೇಶಿತ ಯೋಜನೆಯ ಸುತ್ತಮುತ್ತ ಭೂಮಿಯ ಬೆಲೆ ಈಗಾಗಲೇ ಏರಿಕೆಯಾಗಿದೆ ಎಂದರು.