ಉಡುಪಿ: ಮಲ್ಪೆ ಕೊಳ ಹಾಗೂ ಮಲ್ಪೆ ಪಡುಕೆರೆ ಪ್ರದೇಶದಲ್ಲಿ ಹಲವಾರ ವರ್ಷಗಳಿಂದ ವಾಸಿಸುತ್ತಿರುವ 143 ಮೀನುಗಾರರ ಕುಟುಂಬಗಳಿಗೆ ಶಾಸಕ ಕೆ.ರಘುಪತಿ ಭಟ್ ಖಾಯಂ ನಿವೇಶನ ಹಕ್ಕು ಪತ್ರಗಳನ್ನು ವಿತರಿಸಿದರು.
ಸಿ.ಆರ್.ಝಡ್ ನಿಯಮಾವಳಿಯಲ್ಲಿನ ಸಮಸ್ಯೆಯಿಂದಾಗಿ 143 ಕುಟುಂಗಳಿಗೆ ಹಕ್ಕು ಪತ್ರವನ್ನು ನೀಡುವಲ್ಲಿ ತೊಡಕುಂಟಾಗಿತ್ತು. ಈ ಸಮಸ್ಯೆಯನ್ನು ಬಗೆಹರಿಸಿ ವಿಶೇಷ ಪ್ರಕರಣದಡಿಯಲ್ಲಿ ಖಾಯಂ ನಿವೇಶನ ಹಕ್ಕುಪತ್ರವನ್ನು 2ನೇ ಹಂತದಲ್ಲಿ 143 ಅರ್ಹ ಫಲಾನುಭವಿಗಳ ಕುಟುಂಬಗಳಿಗೆ ಶಾಸಕ ಕೆ.ರಘುಪತಿ ಭಟ್ ಮನೆ ಮನೆಗೆ ತೆರಳಿ ಹಕ್ಕು ಪತ್ರ ವಿತರಿಸಿದರು.
ಬಳಿಕ ಮಾತನಾಡಿದ ಅವರು, ಮಲ್ಪೆ ಕೊಳ ಹಾಗೂ ಮಲ್ಪೆ ಪಡುಕೆರೆ ಪ್ರದೇಶದಲ್ಲಿ ಬಹಳ ವರ್ಷಗಳ ಹಿಂದಿನಿಂದ ಮನೆ ನಿರ್ಮಿಸಿಕೊಂಡು ವಾಸ್ತವ್ಯವಿರುವ ಮೀನುಗಾರರ ಕುಟುಂಬಗಳಿಗೆ ಖಾಯಂ ನಿವೇಶನ ಹಕ್ಕು ಪತ್ರ ನೀಡುವಲ್ಲಿ 57 ಎಕರೆ ಪ್ರದೇಶವು ದಾಖಲೆಯಲ್ಲಿ ಸಮುದ್ರ ಎಂದು ನಮೂದಾಗಿತ್ತು. ಈ ತೊಡಕನ್ನು ನಿವಾರಿಸಿ ಹಿಂದಿನ ಅವಧಿಯಲ್ಲಿ ಮೊದಲ ಬಾರಿಗೆ ಸಮುದ್ರ ಎಂದು ನಮೂದಾಗಿರುವ ನಿವೇಶನವನ್ನು ಸರ್ವೇ ನಂಬರ್ ಸಹಿತ ಕಂದಾಯ ಇಲಾಖೆಯಲ್ಲಿ ದಾಖಲಿಸಿ ಅಧಿಸೂಚನೆಯನ್ನು ಹೊರಡಿಸಿ 358 ಕುಟುಂಬಗಳಿಗೆ ಪ್ರಾರಂಭಿಕ ಹಂತದಲ್ಲಿ ಖಾಯಂ ನಿವೇಶನ ಹಕ್ಕು ಪತ್ರ ನೀಡಲಾಯಿತು ಎಂದರು.
ಈ ಸಂದರ್ಭದಲ್ಲಿ ಉಡುಪಿ ನಗರ ಸಭೆಯ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್, ಉಪಾಧ್ಯಕ್ಷರಾದ ಲಕ್ಷ್ಮೀ ಮಂಜುನಾಥ್, ನಗರ ಸಭಾ ಸದಸ್ಯರಾದ ಎಡ್ಲಿನ್ ಕರ್ಕಡ, ಸದಸ್ಯರಾದ ವಿಜಯ್ ಕುಂದರ್, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷರಾದ ದಯಾನಂದ ಸುವರ್ಣ ಉಪಸ್ಥಿತರಿದ್ದರು.