ಉಡುಪಿ: ಪಾಂಗಾಳದಲ್ಲಿ ನಡೆದ ಶರತ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಶರತ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ.
ಶರತ್ ಶೆಟ್ಟಿ ಕೊಲೆ ನಡೆದ ಸಂದರ್ಭದಲ್ಲಿ ಪಾಂಗಾಳದ ಆಲಡೆ ರಸ್ತೆಯತ್ತ ಆರೋಪಿಗಳು ತೆರಳಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕೊಲೆ ನಡೆದ ಸಂದರ್ಭದಲ್ಲಿ ಬೈಕ್ನಲ್ಲಿ ಮೂವರು ಕತ್ತಿ ಹಿಡಿದುಕೊಂಡು ಹಾಗೂ ಓರ್ವ ನಡೆದುಕೊಂಡು ಓಡಿ ಹೋಗಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಪೊಲೀಸ್ ಶ್ವಾನ ದಳ ನಾಯಿ ಕೂಡಾ ಆಲಡೆ ರಸ್ತೆಯವರೆಗೂ ಓಡಿ ಹೋಗಿದ್ದು ಬಳಿಕ ಹಿಂದೆ ಬಂದಿದೆ. ಶರತ್ ಕೊಲೆ ಪ್ರಕರಣದಲ್ಲಿ ಒಟ್ಟು ನಾಲ್ಕು ಮಂದಿ ಭಾಗಿಯಾರಿವು ಕುರಿತು ಪೊಲೀಸರಿಗೆ ಸಂಶಯ ವ್ಯಕ್ತವಾಗಿದ್ದು, ಇದೀಗ ಸಿಸಿ ಟಿಸಿ ದೃಶ್ಯಾವಳಿ ವೈರಲ್ ಆಗಿದೆ. ಪೊಲೀಸರು ಇದನ್ನು ಮದೃಢಪಡಿಸಿಲ್ಲವಾದರೂ ಸ್ಥಳೀಯರು ಇದನ್ನು ಪಾಂಗಾಳ ಆಲಡೆ ರಸ್ತೆಯ ಬಳಿಯ ದೃಶ್ಯಾವಳಿ ಎಂದು ಗುರುತಿಸಿದ್ದಾರೆ.
ಮೃತ ಶರತ್ ಶೆಟ್ಟಿ, ಭೂವ್ಯವಹಾರ, ಗುತ್ತಿಗೆದಾರಿಕೆ ಸಹಿತ ವಿವಿಧ ಕೆಲಸಗಳನ್ನು ನಿರ್ವಹಿಸುತ್ತಿದ್ದರು. ಶರತ್ ಕೊಲೆ ನಡೆದ ದಿನ ಶರತ್ ಮೊಬೈಲ್ಗೆ ಕರೆ ಮಾಡಿದ್ದ ಪರಿಚಿತರು ಪಾಂಗಾಳದ ಶ್ರೀ ಜನಾರ್ದನ ದೇವಸ್ಥಾನದ ಬಳಿಯ ಕಾಂಪ್ಲೆಕ್ಸ್ವೊಂದರ ಬಳಿಗೆ ಮಾತುಕತೆಗೆಂದು ಕರೆದಿದ್ದಾರೆ. ಮಾತುಕತೆ ಮಧ್ಯೆಯೇ ಹರಿತವಾದ ಆಯುಧದಿಂದ ಶರತ್ ಶೆಟ್ಟಿಗೆ ಇರಿದು ಪರಾರಿಯಾಗಿದ್ದಾರೆ.
ಶರತ್ ಶೆಟ್ಟಿ ಮೇಲೆ ಹಲ್ಲೆಯಾಗುತ್ತಿದ್ದಂತೆ ಸಾರ್ವಜನಿಕರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ಶರತ್ ಸಾವನ್ನಪ್ಪಿದ್ದರು. ಸದ್ಯ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.