ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿ ವತಿಯಿಂದ ಬೆಂಗಳೂರು ರವೀಂದ್ರ ಕಲಾ ಕ್ಷೇತ್ರದಲ್ಲಿ ಮಂಗಳವಾರ ನಡೆದ ರಾಜ್ಯ ಮಟ್ಟದ ಪ್ರೌಢಶಾಲಾ ಮಕ್ಕಳ ನಾಟಕ ಸ್ವರ್ಧೆಯಲ್ಲಿ ಕುಂದಾಪುರ ತಾಲೂಕಿನ ಹಕ್ಲಾಡಿ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಅಭಿನಯಿಸಿರುವ “ಪಂಚವಟಿಯ ಮಾಯಾ ಮುಖಗಳು” ನಾಟಕ ಪ್ರಥಮ ಸ್ಥಾನವನ್ನು ಪಡೆದಿದೆ.
ಕರ್ನಾಟಕ ಸರಕಾರ ನಾಟಕ ಅಕಾಡೆಮಿ ಬೆಂಗಳೂರು ವತಿಯಿಂದ ಪ್ರಥಮ ಬಾರಿಗೆ ಏರ್ಪಡಿಸಿದ್ದ ರಾಜ್ಯ ಮಟ್ಟದ ಪ್ರೌಢಶಾಲಾ ನಾಟಕ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯಿಂದ ಏಕ ಮಾತ್ರ ಶಾಲೆಯಾಗಿ ಆಯ್ಕೆಯಾಗಿದ್ದ ಹಕ್ಲಾಡಿ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.
ಈ ನಾಟಕ ಸ್ಪರ್ಧೆಯಲ್ಲಿ ರಾಜ್ಯದ ನಾನಾ ಜಿಲ್ಲೆಗಳಿಂದ ವಿದ್ಯಾರ್ಥಿಗಳು ನಾಟಕವನ್ನು ಪ್ರದರ್ಶಿಸಿದ್ದರು. ಎಲ್ಲಾ ವಿಭಾಗದಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ ಹಕ್ಲಾಡಿ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.
ಕುವೆಂಪುರವರ ಶ್ರೀ ರಾಮಾಯಣ ದರ್ಶನಂ ಮೂಲಾಧಾರಿತ “ಪಂಚವಟಿಯ ಮಾಯಾ ಮುಖಗಳು” ನಾಟಕವನ್ನು ಯುವನಿರ್ದೇಶಕ ಪ್ರಥ್ವಿನ್ . ಕೆ . ಉಡುಪಿ ನಿರ್ದೇಶಿಸಿದ್ದಾರೆ. ಹಕ್ಲಾಡಿ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಡಾ ಕಿಶೋರ ಕುಮಾರ ಶೆಟ್ಟಿ ನಿರ್ಮಾಣ ಮಾಡಿದ್ದು, ಹಕ್ಲಾಡಿ ಸರಕಾರಿ ಪ್ರೌಢಶಾಲೆಯಿಂದ ನಿರ್ವಹಣೆ ಮಾಡಲಾಗಿದೆ.
`ರಾಜ್ಯಪ್ರಶಸ್ತಿ ಪಂಚವಟಿ ನಾಟಕಕ್ಕೆ ಬಂದಿರುವುದು ತುಂಬಾ ಸಂತೋಷ ತಂದಿದೆ. ಯುವ ನಿರ್ದೇಶಕ ಶ್ರೀ ಪ್ರಥ್ವಿನ್ ಉಡುಪಿ ಇವರ ಪ್ರಯತ್ನ ಮತ್ತು ಗ್ರಾಮೀಣ ಭಾಗದ ಸೃಜನಶೀಲ ವಿದ್ಯಾರ್ಥಿಗಳ ಸಾಂಘಿಕ ಪ್ರಯತ್ನದಿಂದ ಈ ಪ್ರಶಸ್ತಿ ಲಭಿಸಿದೆ. ಇದು ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯಗಳಿಗೆ ಗ್ರಾಮೀಣ ಭಾಗದ ಶಾಲೆಗಳು ಪ್ರತಿಕ್ರಿಯಿಸಿರುವುದಕ್ಕೆ ಉದಾಹರಣೆಯಾಗಿದೆ.’
-ಡಾ ಕಿಶೋರ ಕುಮಾರ ಶೆಟ್ಟಿ, ಹಕ್ಲಾಡಿ ಶಾಲಾ ಮುಖ್ಯೋಪಾಧ್ಯಾಯರು
`ಒಂದು ನಾಟಕ ಯಶಸ್ವಿ ಆಗಬೇಕಾದರೆ ಬರಿಯ ನಿರ್ದೇಶಕ ಇದ್ದರೆ ಸಾಲದು. ಅದಕ್ಕೆ ಸೃಜನಶೀಲ ಕಲಾವಿದರು ಅಷ್ಟೇ ಅಗತ್ಯ. ಆಗ ಒಂದು ನಾಟಕ ಪರಿಪೂರ್ಣ ಆಗಲು ಸಾಧ್ಯ. ಅದಕ್ಕೆ ಸಾಕ್ಷಿ ಇಂತಹ ಗ್ರಾಮೀಣ ಭಾಗದ ನಿಷ್ಕಲ್ಮಶ ಯುವ ಪ್ರತಿಭೆಗಳು್ ಹಾಗೂ ಅವರ ಸರ್ವತೋಮುಖ ಬೆಳವಣಿಗೆಗೆ ಬೆನ್ನೆಲುಬಾದ ಶಾಲಾ ಮಂಡಳಿ ಹಾಗೂ ಶಿಕ್ಷಕರು’
–ಪ್ರಥ್ವಿನ್ . ಕೆ . ಉಡುಪಿ, ನಿರ್ದೇಶಕರು