ಚೆನ್ನೈ: ಕನ್ನಡದ ಸೂಪರ್ ಹಿಟ್ ಚಿತ್ರ ನಾಗಮಂಡಲ ಸೇರಿದಂತೆ ಹಲವಾರು ಹಿಟ್ ಚಿತ್ರಗಳಲ್ಲಿ ನಟಿಸಿದ್ದ ಬಹುಭಾಷಾ ನಟಿ ವಿಜಯಲಕ್ಷ್ಮೀ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಅವರು, ಇದು ನನ್ನ ಕಡೆಯ ವಿಡಿಯೋ ಎಂಬುದಾಗಿ ಹೇಳಿಕೊಂಡಿದ್ದರು. ತಮಿಳು ಹಾಗೂ ಕನ್ನಡದಲ್ಲಿ ಮಾತನಾಡಿರುವ ಅವರು, ತಾನು ಕನ್ನಡಿಗತಿ ಎಂಬ ಕಾರಣಕ್ಕೆ ನನಗೆ ತಮಿಳು ನಟ, ರಾಜಕಾರಣಿ ಸೀಮನ್ ಹಾಗೂ ಹರಿನಾಡರ್ ಎಂಬವರು ತೀರಾ ಹಿಂಸೆ ನೀಡಿರುವುದಾಗಿ ಆರೋಪಿಸಿದ್ದು, ನನ್ನ ಸಾವಿಗೆ ಅವರೇ ಕಾರಣ ಎಂಬುದಾಗಿ ನೇರ ಆರೋಪ ಮಾಡಿದ್ದಾರೆ. ನಾನು ಹುಟ್ಟಿದ್ದು ಕರ್ನಾಟಕ. ಭಾಷೆ ತಮಿಳು. ನಾನು ಕರ್ನಾಟಕದಲ್ಲಿ ಹುಟ್ಟಿದ್ದೇನೆ ಎಂಬ ಕಾರಣಕ್ಕೆ ತೀರಾ ಮಾನಸಿಕ ಹಿಂಸೆ ನೀಡಲಾಗಿದೆ ಎಂದು ಅವರು ವಿಡಿಯೋದಲ್ಲಿ ಆರೋಪಿಸಿದ್ದಾರೆ. ಕಳೆದ 4 ತಿಂಗಳಿನಿಂದ ಈ ವಿಚಾರವಾಗಿ ನಾನು ತುಂಬಾ ಖಿನ್ನತೆಗೆ ಒಳಗಾಗಿದ್ದೇನೆ. ಸೀಮನ್ ಹಾಗೂ ಹರಿನಾಡರ್ ಅವರನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡಬೇಡಿ ಎಂಬುದಾಗಿ ಅವರು ತಮ್ಮ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ. ನಾನು ಬದುಕಬೇಕೆಂದು ಆಸೆಪಟ್ಟೆ ಆದರೆ ಸೀಮನ್ ಹಾಗೂ ಹರಿನಾಡರ್ ನನ್ನನ್ನು ಬದುಕಲು ಬಿಡುತ್ತಿಲ್ಲ ಎಂದು ಅವರು ಹೇಳಿದ್ದಾರೆ. ನನ್ನ ಸಾವು ಎಲ್ಲರ ಕಣ್ಣುತೆರೆಸಬೇಕು ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ. ನಾನು ಈಗಾಗಲೇ ೩ ಬಿ.ಪಿ ಮಾತ್ರೆಗಳನ್ನು ಸೇವಿಸಿದ್ದೇನೆ ಎಂಬುದಾಗಿ ಹೇಳಿದ್ದಾರೆ. ಈ ವಿಡಿಯೋ ಗಮನಿಸಿದ ಅವರ ಕುಟುಂಬಿಕರು, ಆಪ್ತರು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು ಸದ್ಯ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ನಾಗಾಭರಣ ನಿರ್ದೇಶನದ ನಾಗಮಂಡಲ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ನಟಿ ವಿಜಯ್ ಲಕ್ಷ್ಮಿ ಆ ಬಳಿಕ ಸೂರ್ಯವಂಶ, ಜೋಡಿಹಕ್ಕಿ ಸೇರಿದಂತೆ ೪೦ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂದವರು. ಆ ಕಾಲದಲ್ಲಿ ಕನ್ನಡದಲ್ಲಿ ಬಹುಬೇಡಿಕೆಯ ನಟಿಯಾಗಿದ್ದರು. ಇದೇ ಸಮಯದಲ್ಲೇ ಅವರು ತಮಿಳು ಚಿತ್ರರಂಗಕ್ಕೂ ಕಾಲಿಟ್ಟು ಅನೇಕ ಸಿನಿಮಾಗಳಲ್ಲಿ ನಟಿಸಿ ಸ್ಟಾರ್ ಹಿರೋಯಿನ್ ಅನಿಸಿಕೊಂಡಿದ್ದರು. ಹಲವು ವರ್ಷ ಚಿತ್ರರಂಗದಲ್ಲಿ ಮೆರೆದಾಡಿದ್ದ ನಟಿ ವಿಜಯಲಕ್ಷ್ಮಿ ಆ ಬಳಿಕ ಚಿತ್ರರಂಗದಿಂದ ದೂರ ಉಳಿದಿದ್ದರು. ಈ ನಡುವೆ ೨೦೦೬ರಲ್ಲಿ ಅವರು ಆತ್ಮಹತ್ಯೆಗೆ ವಿಫಲಯತ್ನ ನಡೆಸಿದ್ದರು ಎನ್ನಲಾಗಿದೆ. ಬಳಿಕ ತಮಿಳು ನಟ ಸೀಮನ್ ಅವರೊಂದಿಗೆ ಒಡನಾಟ ಇರಿಸಿಕೊಂಡಿದ್ದ ನಟಿ ಇತ್ತೀಚಿನ ಕೆಲವು ಸಮಯಗಳಿಂದ ಸೀಮನ್ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಅದಲ್ಲದೇ ಇತ್ತೀಚೆಗೆ ಮನೆ ಬಾಡಿಗೆ ಕಟ್ಟಲಾಗದ ಪರಿಸ್ಥಿತಿಯಲ್ಲಿ ವಿಜಯಲಕ್ಷ್ಮಿ ಇರುವ ಬಗ್ಗೆ ವರದಿಯಾಗಿತ್ತು. ಈ ಸಂದರ್ಭ ಅನೇಕ ಕನ್ನಡ ಸೇರಿದಂತೆ ಇತರ ಭಾಷೆಯ ನಟರು ಅವರಿಗೆ ಸಹಾಯ ಮಾಡಿದ್ದರು.