ಸುರತ್ಕಲ್: ಗಾಂಜಾ ಅಮಲಿನಲ್ಲಿದ್ದ ಯುವಕರ ಗುಂಪೊಂದು ಸಾರ್ವಜನಿಕರ ಎದುರು ತಲವಾರು ಝಳಪಿಸುತ್ತಾ ರಿಕ್ಷಾ ಚಾಲಕ ಸೇರಿದಂತೆ ಕೆಲವು ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿರುವ ಘಟನೆ ಪಣಂಬೂರು ಮೊಗವೀರ ಮಹಾಸಭಾ ವ್ಯಾಪ್ತಿಗೆ ಒಳಪಟ್ಟ ಚಿತ್ರಾಪುರ ಕಡಲಕಿನಾರೆಯಲ್ಲಿ ನಡೆದಿದೆ.
ಕಳೆದ ಸಾಕಷ್ಟು ಸಮಯದಿಂದ ಚಿತ್ರಾಪುರ ಕಡಲ ಕಿನಾರೆಯ ಬಳಿ ಕಡಲ್ಕೊರೆತ ತಡೆಗೆ ಹಾಕಿದ್ದ ಕಲ್ಲುಗಳ ಮಧ್ಯೆ ಭಾಗದಲ್ಲಿ ಕೆಲ ಯುವಕರು ಗಾಂಜಾ ಸೇವನೆ, ಮಾರಾಟ ಹಾಗೂ ಅನೈತಿಕ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಈ ಬಗ್ಗೆ ಪಣಂಬೂರು ಮೊಗವೀರ ಮಹಾಸಭಾದ ಪ್ರಮುಖರು ಮತ್ತು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿ, ಎಚ್ಚರಿಕೆ ನೀಡಿದ್ದರು. ಇದರಿಂದ ಯುವಕರು ಗುಂಪು ಕೋಪಗೊಂಡಿತ್ತು.
ಅಂತೆಯೇ ಭಾನುವಾರ ಸಂಜೆ ಗಾಂಜಾ ಅಮಲಿನಲ್ಲಿದ್ದ ಯುವಕರು ತಲವಾರು ಹಿಡಿದು, ‘ನಿಮ್ಮನ್ನೆಲ್ಲಾ ಸುಮ್ಮನೆ ಬಿಡು ವುದಿಲ್ಲ’ ಎಂದು ಬೆದರಿಸುತ್ತಾ ಅಲ್ಲಿಯೇ ಇದ್ದ ರಿಕ್ಷಾ ಚಾಲಕ ಸುನಿಲ್ ಎಂಬುವರ ಮೇಲೆ ಹಾಗೂ ಕೆಲವು ಜನಗಳ ಮೇಲೂ ಹಲ್ಲೆ ನಡೆಸಲು ಯತ್ನಿಸಿದ್ದಾರೆ. ಗಾಯಗೊಂಡ ರಿಕ್ಷಾ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಂಜಾದ ಅಮಲಿನಲ್ಲಿ ಹಲ್ಲೆ ನಡೆಸಿದ ಅಮನ್ ಎಂಬಾತನನ್ನು ಸಾರ್ವಜನಿಕರು ಹಿಡಿದು ಪೋಲಿಸರಿಗೆ ಒಪ್ಪಿಸಿದ್ದಾರೆ. ಈ ಬಗ್ಗೆ ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.