ಕೊಲಂಬೊ: ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ನಲುಗುತ್ತಿರುವ ಶ್ರೀಲಂಕಾದಲ್ಲಿ ಪ್ರತಿಭಟನೆ ಭುಗಿಲೆದ್ದಿದ್ದು , ಪ್ರಧಾನಿ ಮಹಿಂದಾ ರಾಜಪಕ್ಸೆ ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಶುಕ್ರವಾರ ನಡೆದ ವಿಶೇಷ ಸಭೆಯಲ್ಲಿ ಅಧ್ಯಕ್ಷ ಗೊಟ್ಬಯಾ ರಾಜಪಕ್ಸೆ ಅವರು ದೇಶದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿಗೆ ಪರಿಹಾರವಾಗಿ ಅಧಿಕಾರದಿಂದ ಕೆಳಗಿಳಿಯುವಂತೆ ಪ್ರಧಾನಿಗೆ ಮನವಿ ಮಾಡಿದ ಕೆಲವು ದಿನಗಳ ನಂತರ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರು ಇಂದು ಪ್ರಧಾನಿ ಹುದ್ದೆಯಿಂದ ಕೆಳಗಿಳಿದಿದ್ದಾರೆ ಎಂದು ವರದಿಯಾಗಿದೆ.
ಶ್ರೀಲಂಕಾದ ಪ್ರಧಾನಿ ಮಹಿಂದಾ ರಾಜಪಕ್ಸೆ ಸೋಮವಾರ ಅಧ್ಯಕ್ಷ ಗೋಟಾಬಯ ಅವರಿಗೆ ರಾಜೀನಾಮೆ ಸಲ್ಲಿಸಿದರು. ದ್ವೀಪ ರಾಷ್ಟ್ರವು ಸ್ವಾತಂತ್ರ್ಯದ ನಂತರದ ತನ್ನ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ ಇದು ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದೆ.
ಪ್ರಸ್ತುತ ಆರ್ಥಿಕ ಬಿಕ್ಕಟ್ಟಿನಿಂದ ದೇಶವನ್ನು ಮಾರ್ಗದರ್ಶನ ಮಾಡಲು ನೀವು ಸರ್ವಪಕ್ಷ ಸರ್ಕಾರವನ್ನು ನೇಮಿಸಲು ಸಾಧ್ಯವಾಗುವಂತೆ ನಾನು ತಕ್ಷಣದಿಂದ ಜಾರಿಗೆ ಬರುವಂತೆ ರಾಜೀನಾಮೆ ನೀಡುತ್ತಿದ್ದೇನೆ” ಎಂದು ಪ್ರಧಾನಿ ಪತ್ರದಲ್ಲಿ ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎಫ್ಪಿ ವರದಿ ಮಾಡಿದೆ.
ಕೊಲಂಬೋದಲ್ಲಿ ನಾಗರಿಕರು ಇಂದು ಬೆಳಗ್ಗೆ ಪ್ರಧಾನಿಯವರ ಅಧಿಕೃತ ನಿವಾಸ ಟೆಂಪಲ್ ಟ್ರೀಸ್ ಎದುರು ಪ್ರತಿಭಟನೆ ನಡೆಸಿ, ಪ್ರಧಾನಿ ಮಹಿಂದಾ ರಾಜಪಕ್ಸೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದರು. ಈ ವೇಳೆ ಸರ್ಕಾರದ ಪರವಾಗಿದ್ದವರು ಹಾಗೂ ಪ್ರತಿಭಟನಾಕಾರರ ನಡುವೆ ಭಾರೀ ಘರ್ಷಣೆಯಾಗಿ ಅನಿರ್ದಿಷ್ಟಾವಧಿ ಕರ್ಫ್ಯೂ ವಿಧಿಸಲಾಯಿತು. ಘರ್ಷಣೆಯಲ್ಲಿ 20 ಮಂದಿ ಗಾಯಗೊಂಡಿದ್ದಾರೆ. ಆಡಳಿತ ಪಕ್ಷದ ಸಂಸದರೊಬ್ಬರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಪ್ರತಿಭಟನಾಕಾರರು ಬಸ್ಗಳಿಗೆ ಬೆಂಕಿ ಹಚ್ಚಿದ್ದಾರೆ ಮತ್ತು ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಮತ್ತು ಅವರ ಸಹೋದರ ಮಹಿಂದ ರಾಜಪಕ್ಸೆ ಅವರ ಪೋಷಕರಿಗೆ ನಿರ್ಮಿಸಿದ ಸ್ಮಾರಕವನ್ನು ಧ್ವಂಸಗೊಳಿಸಿದ್ದಾರೆ . ಇಬ್ಬರು ಮಾಜಿ ಸಚಿವರ ಮನೆಗಳಿಗೂ ಬೆಂಕಿ ಹಚ್ಚಲಾಗಿದೆ.ಸಂಸದ ಅಮರಕೀರ್ತಿ ಆತುಕೋರಲ ಅವರು ನಿಟ್ಟಂಬುವದಲ್ಲಿ ಅವರ ಕಾರನ್ನು ತಡೆದಿದ್ದ ಇಬ್ಬರು ವ್ಯಕ್ತಿಗಳಿಗೆ ಗುಂಡು ಹಾರಿಸಿ ತೀವ್ರವಾಗಿ ಗಾಯಗೊಂಡರು ಮತ್ತು ನಂತರ ಅವರು ಹತ್ತಿರದ ಕಟ್ಟಡದಲ್ಲಿ ಆಶ್ರಯ ಪಡೆಯಲು ಪ್ರಯತ್ನಿಸಿದ ನಂತರ ಶವವಾಗಿ ಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರು ಅಶ್ರುವಾಯು ಶೆಲ್ಗಳು ಮತ್ತು ಜಲ ಫಿರಂಗಿಗಳನ್ನು ಹಾರಿಸಿದರು . ಈ ಘರ್ಷಣೆಯ ಬೆನ್ನಲ್ಲೇ ಕೊಲೊಂಬೋದಲ್ಲಿ ಕರ್ಫ್ಯೂ ಘೋಷಿಸಲಾಯಿತು. ಮಂಗಳವಾರ ಬೆಳಗ್ಗೆ 7 ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ತಿಳಿದುಬಂದಿದೆ.
ಸ್ವಾತಂತ್ರ್ಯದ ನಂತರ ಶ್ರೀಲಂಕಾ ಕೆಟ್ಟ ಆರ್ಥಿಕ ಬಿಕ್ಕಟ್ಟಿನಲ್ಲಿದ್ದು , ವಿದೇಶಿ ವಿನಿಮಯ ಕೊರತೆಯಿಂದ
ಸಂಕಷ್ಟದಲ್ಲಿದೆ. ಇದು ಶ್ರೀಲಂಕಾದಲ್ಲಿ ಆಹಾರ, ಇಂಧನ ಮತ್ತು ಔಷಧಿ ಇತರ ಅಗತ್ಯ ವಸ್ತುಗಳ ಕೊರತೆಯಿಂದ ನಲುಗಿದೆ.