ಉಳ್ಳಾಲ : ತೊಕ್ಕೊಟ್ಟು ಮೊಸರು ಕುಡಿಕೆ ಉತ್ಸವ ಸಂದರ್ಭ ಹುಲಿ ವೇಷ ಹಾಕಿ ಕುಣಿದ ಯುವಕರು ಅದರಿಂದ ಬಂದ ದೇಣಿಗೆ ಮೊತ್ತವನ್ನು ಕ್ಯಾನ್ಸರ್ ಪೀಡಿತರು ಮತ್ತು ಅಶಕ್ತರಿಗೆ ನೀಡಿ ಮಾದರಿಯಾಗಿದ್ದಾರೆ.
ಇತ್ತೀಚೆಗೆ ತೊಕ್ಕೊಟ್ಟಿನಲ್ಲಿ ನಡೆದ 2022ರ ಸಾಲಿನ ಮೊಸರು ಕುಡಿಕೆ ಉತ್ಸವದ ಶೋಭಾಯಾತ್ರೆಯಲ್ಲಿ ಉಳ್ಳಾಲಬೈಲಿನ ವೈದ್ಯನಾಥ ಫ್ರೆಂಡ್ಸ್ (ರಿ) ಹಾಗೂ ಟೀಮ್ ಛತ್ರಪತಿ ತಂಡವು ಹುಲಿ ವೇಷದ ಟ್ಯಾಬ್ಲೋ ಮೂಲಕ ಜನರನ್ನು ರಂಜಿಸಿತ್ತು. ಹುಲಿ ವೇಷಧಾರಿಗಳು ತೊಕ್ಕೊಟ್ಟು ಪರಿಸರದ ಮನೆ, ಮಳಿಗೆಗಳ ಅಂಗಳದಲ್ಲಿ ಕುಣಿದು ಅದರಿಂದ ಬಂದ ದೇಣಿಗೆಯಲ್ಲಿ ಉಳಿದ 60,000 ರೂ. ಹಣವನ್ನು ಸಮಾಜದ ದುರ್ಬಲರಿಗೆ ನೀಡಿದ್ದಾರೆ.
ಹುಲಿ ವೇಷದಿಂದ ಬಂದ ದೇಣಿಗೆ ಹಣವನ್ನು ಸ್ವಂತಕ್ಕೆ ಬಳಸದೆ ಸಮಾಜದ ಅಶಕ್ತರಿಗೆ ನೀಡುವ ಮೂಲಕ ಮಾದರಿಯಾದ ವೈದ್ಯನಾಥ ಫ್ರೆಂಡ್ಸ್, ಟೀಮ್ ಛತ್ರಪತಿ ತಂಡದ ಸೇವಾ ಕಾರ್ಯವು ಜನರ ಶ್ಲಾಘನೆಗೆ ಪಾತ್ರವಾಗಿದೆ.
ಸಹಾಯ ಸಣ್ಣಮಟ್ಟದ್ದಾಗಿರಲೀ, ದೊಡ್ಡದಾಗಿರಲೀ, ಸಹಾಯ ಸಹಾಯವೇ. ಯಾವುದೇ ಫಲಾಪೇಕ್ಷೆ ಇಲ್ಲದೇ, ನಿಸ್ವಾರ್ಥ ಮನಸ್ಸಿನಿಂದ ಮತ್ತೊಬ್ಬರಿಗೆ ಸಹಾಯಮಾಡುವ ಅದೆಷ್ಟು ಮಾನವೀಯಮುಖಗಳು ನಮ್ಮ ನಡುವೆ ಇದ್ದಾರೆ ಎನ್ನುವುದೇ ಹೆಮ್ಮೆ. ಇನ್ನೊಬ್ಬರ ಕಷ್ಟಕ್ಕೆ, ನೋವಿಗೆ ಸ್ಪಂದಿಸುವುದು ಸಹೃದಯಿಗಳಿಂದಷ್ಟೇ ಸಾಧ್ಯ. ಅಂತಹ ಸಹೃದಯಿಗಳು ತಾವಾಗಿದ್ದರೇ ಅಥವಾ ನಿಮಗೆ ತಿಳಿದಿದ್ದರೇ ಅಂಥವರನ್ನು ಪರಿಚಯಿಸುವುದು ನಮ್ಮ ಹೆಮ್ಮೆ. ‘ಸಹಾಯಹಸ್ತ’ ಎನ್ನುವ ಶೀರ್ಷಿಕೆಯಡಿ ನಾವು, ನೆರವಾದವರು ಹಾಗೂ ನೆರವು ಯಾಚಿಸುವವರಿಗೆ ಸಂಬಂಧಿಸಿ ವರದಿ ಪ್ರಕಟಿಸುತ್ತೇವೆ. ಇದರಿಂದ ನಿಮ್ಮ ಕಾರ್ಯಕ್ಕೆ ಶ್ಲಾಘನೆ, ನೆರವು ನೀಡಲು ಪ್ರೇರಣೆ ಜೊತೆಗೆ ಅಗತ್ಯವುಳ್ಳವರಿಗೆ ನೆರವು ಸಿಗಬಹುದೆಂಬ ನಿರೀಕ್ಷೆ ನಮ್ಮದು. ಒಂದು ಮಾತು, ನೀವು ಸಹಾಯಮಾಡುತ್ತಿರುವ ಭಾವಚಿತ್ರವನ್ನು ನಾವಿಲ್ಲಿ ಪ್ರಕಟಿಸುವುದಿಲ್ಲ. ನಿಮ್ಮ/ಸಂಘಟನೆ ಹೆಸರು ಪ್ರಕಟಿಸುತ್ತೇವೆ. ನೀವು ಬಯಸಿದ್ದಲ್ಲಿ ನಿಮ್ಮ/ ಸಂಘಟನೆ ಸದಸ್ಯರ ಭಾವಚಿತ್ರ ಮಾತ್ರ ಪ್ರಕಟಿಸುತ್ತೇವೆ. ಇನ್ನು ಸಹಾಯದ ನಿರೀಕ್ಷೆಯಲ್ಲಿರುವವರು ನೀವಾಗಿದ್ದರೇ, ನಿಮ್ಮ ಅನುಮತಿ ಇದ್ದಲ್ಲಿ ಮಾತ್ರ ಭಾವಚಿತ್ರ ಪ್ರಕಟಿಸುತ್ತೇವೆ.
ವಿವರಗಳನ್ನು ನಮ್ಮ ಸಂಖ್ಯೆ 6363376133 , 9019944921 ವಾಟ್ಸ್ಸ್ಯಾಪ್ ಮಾಡಿ. ಅಥವಾ [email protected] ಇ-ಮೈಲ್ ಮಾಡಿ.