ಮಂಗಳೂರು: ಕನ್ನಡ ರಂಗಭೂಮಿಯ ಹಿರಿಯ ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯರಿ (68) ಶುಕ್ರವಾರ ಬೆಳಿಗ್ಗೆ ನಿಧನ ಹೊಂದಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ನಾಯರಿ ಅವರು ಕಳೆದ ಕೆಲ ದಿನಗಳಿಂದ ನಗರದ ಮಂಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಗೋಪಾಲಕೃಷ್ಣ ನಾಯರಿ ಅವರು ಪತ್ನಿ ಹಾಗೂ ಮಗಳನ್ನು ಅಗಲಿದ್ದಾರೆ.
ಉಡುಪಿ ಜಿಲ್ಲೆಯ ಸಾಲಿಗ್ರಾಮದ ಕಾರ್ಕಡದಲ್ಲಿ ಅವರ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಆಪ್ತ ಮೂಲಗಳು ತಿಳಿಸಿವೆ. ನಾಯರಿ ಅವರು ಎನ್ಎಸ್ಡಿಯಲ್ಲಿ ತರಬೇತಿ ಪಡೆದು ಬಳಿಕ ನಾಗೇಶ್ ನಿರ್ದೇಶನದ ತಾಮ್ರಪತ್ರ ನಾಟಕದಲ್ಲಿ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದರು. ಬಳಿಕ ಗಂಗಾಧರ ಸ್ವಾಮಿ ನಿರ್ದೇಶನದಲ್ಲಿ ಸಮುದಾಯದಲ್ಲಿ ಕೊಂದು ಕೂಗಿತ್ತು ನೋಡಾ ನಾಟಕದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು.
ಬೆಂಗಳೂರು ಮತ್ತು ತುಮಕೂರಿನ ನಾಟಕ ಮನೆ ಜೊತೆಗೆ ಗಾಢ ಸಂಬಂಧ ಹೊಂದಿದ್ದ ನಾಯರಿ ಅವರು, ಭಾಸನ ನಾಟಕಗಳಿಗೆ ಹೆಸರುವಾಸಿಯಾಗಿದ್ದರು. ಬೆಂಗಳೂರಿನಲ್ಲಿ ಎನ್ಎಸ್ಡಿಗೆ ಕೆಲವು ಕಾರ್ಯಾಗಾರಗಳನ್ನು ಮತ್ತು ನಾಟಕಗಳನ್ನೂ ನಿರ್ದೇಶನ ಮಾಡಿದ್ದರು. ತುಂಬಾ ಗಂಭೀರ ಸ್ವಭಾವದ ನಾಯರಿ, ಕನ್ನಡ ರಂಗಭೂಮಿಯಲ್ಲಿ ಒಬ್ಬ ಶ್ರೇಷ್ಠ ವ್ಯಕ್ತಿತ್ವದ ರಂಗ ನಿರ್ದೇಶಕ, ನಟನಾಗಿ ಗುರುತಿಸಿಕೊಂಡಿದ್ದರು.