ನವದೆಹಲಿ: ಮಂಗಳೂರು ಹಾಗೂ ಕೊಯಮತ್ತೂರಿನಲ್ಲಿ ನಡೆದ ಸ್ಫೋಟದಲ್ಲಿ ಭಾಗಿಯಾಗಿರುವುದು ನಮ್ಮ ಉಗ್ರರೇ. ದಕ್ಷಿಣ ಭಾರತದಲ್ಲೂ ನಮ್ಮವರು ನೆಲೆಸಿದ್ದಾರೆ ಎಂಬ ಸ್ಫೋಟಕ ವಿಷಯವನ್ನು ಐಎಸ್ಕೆಪಿ ಒಪ್ಪಿಕೊಂಡಿದೆ.
ಖೊರಾಸನ್ ಪ್ರಾಂತ್ಯದ ಇಸ್ಲಾಮಿಕ್ ಸ್ಟೇಟ್ ಎಂಬ ಉಗ್ರ ಸಂಘಟನೆ ತನ್ನ ವಾಯ್ಸ್ ಆಫ್ ಖುರಾಸನ್ ನಿಯತ ಕಾಲಿಕೆಯಲ್ಲಿ ಈ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಅಲ್ ಅಜೈಮ್ ಮೀಡಿಯಾ ಫೌಂಡೇಶನ್ನ ಇಂಗ್ಲೀಷ್ನಲ್ಲಿರುವ 68 ಪುಟಗಳ ವಾಯ್ಸ್ ಆಫ್ ಖುರಾಸನ್ ಪ್ರಚಾರದ ನಿಯತ ಕಾಲಿಕವನ್ನು ಬಿಡುಗಡೆ ಮಾಡಲಾಗಿದೆ.
ಕಳೆದ ವರ್ಷ ಅ. 23ರಂದು ಕೊಯಮತ್ತೂರಿನಲ್ಲಿ ನಡೆದ ಕಾರು ಸ್ಫೋಟ ಮತ್ತು ನ. 19ರಂದು ಮಂಗಳೂರಿನ ಆಟೋ ರಿಕ್ಷಾದಲ್ಲಿ ನಡೆದ ಕುಕ್ಕರ್ ಸ್ಫೋಟವನ್ನು ಐಎಸ್ ಸಂಯೋಜಿತ ಉಗ್ರರು ನಡೆಸಿದ್ದರು ಎಂದು ನಿಯತಕಾಲಿಕೆಯಲ್ಲಿ ಉಲ್ಲೇಖಿಸಿದೆ.
ತಮಿಳುನಾಡಿನ ಕೊಯಮತ್ತೂರು ಹಾಗೂ ಕರ್ನಾಟಕದ ಮಂಗಳೂರಿನಲ್ಲಿ ನಮ್ಮ ದಾಳಿಯಾಗಿದ್ದು, ಅಲ್ಲಿ ನಮ್ಮ ಸಹೋದರರು ನಮ್ಮ ಧರ್ಮದ ಗೌರವಕ್ಕಾಗಿ ಸೇಡು ತೀರಿಸಿಕೊಂಡರು ಎಂದು ಹೇಳಿದೆ.
ನಿಯತಕಾಲಿಕೆಯಲ್ಲಿ ಹಿಂದೂಗಳು, ಬಿಜೆಪಿ ಹಾಗೂ ಭಾರತೀಯ ಸೇನೆ ವಿರುದ್ಧ ಕಿಡಿಕಾರಿದೆ. ದಕ್ಷಿಣ ಭಾರತದಲ್ಲಿ ತನ್ನ ಮುಜಾಹಿದ್ದೀನ್ಗಳನ್ನು ಅವರ ವಿರುದ್ಧ ಯುದ್ಧ ಮಾಡಲು ಪ್ರಚೋದಿಸುತ್ತದೆ ಎಂದು ತಿಳಿಸಿದೆ. ಆದರೆ ಇದರಲ್ಲಿ ದಕ್ಷಿಣ ಭಾರತದಲ್ಲಿ ಯಾವ ರಾಜ್ಯದಲ್ಲಿ ಮುಜಾಹಿದ್ದೀನ್ಗಳು ಸಕ್ರಿಯರಾಗಿದ್ದಾರೆ ಎನ್ನುವುದನ್ನು ಸ್ಪಷ್ಟಪಡಿಸಿಲ್ಲ.
ವಾಯ್ಸ್ ಆಫ್ ಖುರಾಸನ್ ಎಂಬುದು ಮಧ್ಯ ಹಾಗೂ ದಕ್ಷಿಣ ಏಷ್ಯಾದಲ್ಲಿ ಐಸಿಸ್ ಚಟುವಟಿಕೆಯನ್ನು ಉತ್ತೇಜಿಸುವ ನಿಯತಕಾಲಿಕೆಯಾಗಿದೆ. ಇದು ದಾಳಿ ನಡೆಸಲು ಪ್ರಪಂಚದಾದ್ಯಂತ ಉಗ್ರರನ್ನು ಪ್ರಚೋದಿಸುತ್ತದೆ.